ಮುಂಜಾಗ್ರತೆಗಳೇ ಆಪತ್ತಿನ ಮದ್ದು

ಪ್ರಕೃತಿಯಲ್ಲಾಗಲೀ, ಸಾಮಾನ್ಯ ಜೀವನದಲ್ಲಾಗಲೀ ಆಪತ್ತುಗಳು ಸಹಜವಾಗಿ ಬರುತ್ತವೆ. ಅದು ಯಾರ ಕೈಯಲ್ಲಿಯೂ ಇರುವುದಿಲ್ಲ. ಆದರೆ ಮುಂಜಾಗ್ರತೆ ವಹಿಸುವುದು ಮಾತ್ರ ನಮ್ಮ ಕೈಯಲ್ಲಿರುತ್ತದೆ. ಎಷ್ಟೋ ಆಪತ್ತುಗಳಿಂದ ಅಪಾರ ನಷ್ಟ ಉಂಟಾಗಿದ್ದನ್ನು ಗಮನಿಸಿದಾಗ ಒಂದು ಸಣ್ಣ ಮುಂಜಾಗ್ರತೆಯನ್ನು ಕೈಗೊಳ್ಳುವ ಮೂಲಕ ಆ ದೊಡ್ಡ ಆಪತ್ತನ್ನು ಸುಲಭವಾಗಿ ತಪ್ಪಿಸಬಹುದಿತ್ತಲ್ಲವೇ ಎಂದು ಎಷ್ಟೋ ಸಲ ಪರಿತಪಿಸಿದ್ದೇವೆ. ‘ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ’್ಲ ಎಂಬ ನೆಪ ಹೇಳಿ ಸ್ವಲ್ಪ ಸಮಯದಲ್ಲಿ ನಡೆದ ಘಟನೆಯನ್ನು ಮರೆತುಬಿಡುತ್ತೇವೆ. ಘಟನೆ ನಡೆದಾಗ ಮುಂಜಾಗ್ರತೆಗಳ ಬಗ್ಗೆ ಮಾತನಾಡುವ ನಾವು ಮತ್ತೆ ಅದರತ್ತ ಯೋಚನೆಯನ್ನು ಮಾಡುವುದಿಲ್ಲ. ಸರಿಯಾದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದ ಕಾರಣ ಮಗದೊಂದು ಬಾರಿ ಮತ್ತೆ ಅಂತಹ ಆಪತ್ತಿಗೆ ಸಿಲುಕಿಕೊಳ್ಳುತ್ತೇವೆ.
ಮಳೆಗಾಲದಲ್ಲಿ ಕೆಲವು ಸೂಕ್ಷ್ಮ ಪ್ರದೇಶಗಳೆಂದು ತಿಳಿದಿದ್ದರೂ ಅಗತ್ಯವಿರುವ ಸೂಕ್ತ ಮುಂಜಾಗ್ರತೆಗಳನ್ನು ಕೈಗೊಳ್ಳದೇ ಪ್ರವಾಹಕ್ಕೆ ಒಳಗಾಗಿ ಅಪಾರ ಆಸ್ತಿಪಾಸ್ತಿಗಳು ನಷ್ಟಕ್ಕೊಳಗಾದ, ಅಮೂಲ್ಯವಾದ ಪ್ರಾಣಗಳನ್ನು ಕಳೆದುಕೊಂಡ ಸಾಕಷ್ಟು ನಿದರ್ಶನಗಳಿವೆ. ಇವು ಪ್ರತಿವರ್ಷ ಮರುಕಳಿಸುತ್ತಿರುತ್ತದೆ. ಮನುಷ್ಯನ ದುರಾಸೆಯಿಂದ ಭೂಮಿ, ಪ್ರಕೃತಿಯನ್ನು ಹಾಳು ಮಾಡಿ ನಂತರ ವಿಪತ್ತಿಗೆ ನಾವೇ ಮೂಲ ಕಾರಣೀಕರ್ತರಾಗುತ್ತಿದ್ದೇವೆ. ಅಲ್ಲಿಯೂ ಜವಾಬ್ದಾರಿಯುತವಾದ ಮುಂಜಾಗ್ರತೆಯನ್ನು ನಾವು ವಹಿಸಲಿಲ್ಲ. ನಂತರ ಆಪತ್ತು ಸಂಭವಿಸುವoತಹ ಸೂಕ್ಷ್ಮ ಸೂಚನೆಗಳಿದ್ದರೂ ಆಗಲೂ ಮುಂಜಾಗ್ರತೆ ವಹಿಸುವುದಿಲ್ಲ. ವಿಪತ್ತು ಎದುರಾದ ನಂತರ ಬಹಳಷ್ಟು ಪರಿತಪಿಸುತ್ತೇವೆ. ಮಳೆಗಾಲದಲ್ಲಿ ಅತೀ ಹೆಚ್ಚು ಮಳೆ ಸುರಿಯುವಾಗ ಜಿಲ್ಲಾಧಿಕಾರಿಗಳು ಶಾಲಾ ಮಕ್ಕಳಿಗೆ ತಕ್ಷಣ ರಜೆಯನ್ನು ಘೋಷಿಸುತ್ತಾರೆ. ಏಕೆಂದರೆ ಅದು ಸರಕಾರ ವಹಿಸುವ ಒಂದು ಮುಂಜಾಗ್ರತೆ ಕ್ರಮ. ಹವಾಮಾನ ಮುನ್ಸೂಚನೆಯಂತೆ ಕೆಲವು ಪ್ರದೇಶಗಳನ್ನು ‘ರೆಡ್ ಅಲರ್ಟ್’ ಎಂದು ಘೋಷಿಸುತ್ತಾರೆ. ಅವುಗಳೆಲ್ಲವೂ ಆಡಳಿತಾತ್ಮಕವಾಗಿ ಕೈಗೊಳ್ಳುವ ಮುಂಜಾಗ್ರತೆ. ಮಳೆಗಾಲ ಆರಂಭವಾಗುತ್ತಿದ್ದತೆ ಅಧಿಕಾರಿಗಳು, ಇಲಾಖೆಗಳು ಜವಾಬ್ದಾರಿಯಿಂದ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವಂತೆಯೇ ಸಾಮಾನ್ಯ ಜನರು ಕೂಡಾ ತಮ್ಮ ವ್ಯಾಪ್ತಿಯಲ್ಲಿ ಮುಂಜಾಗ್ರತೆಗಳನ್ನು ಕೈಗೊಂಡಲ್ಲಿ ಬಹುತೇಕ ವಿಪತ್ತುಗಳನ್ನು ತಪ್ಪಿಸಬಹುದಾಗಿದೆ. ಮಳೆಗಾಲಕ್ಕಿಂತ ಮುಂಚಿತವಾಗಿ ನದಿ, ಹಳ್ಳಗಳ ಕಿಂಡಿ ಅಣೆಕಟ್ಟುಗಳಲ್ಲಿ ಯಾವುದಾದರೂ ಅಡೆತಡೆಗಳು, ಕಸಕಡ್ಡಿಗಳಿದ್ದಲ್ಲಿ ಸ್ಥಳೀಯ ಗ್ರಾಮಸ್ಥರೇ ತೆರವುಗೊಳಿಸಬೇಕು. ಇದರಿಂದಾಗಿ ಮಳೆಗಾಲದ ಹೆಚ್ಚಿನ ನೀರು ಸುಲಭವಾಗಿ ಹರಿದು ಹೋಗಿ ಪ್ರವಾಹವನ್ನು ತಪ್ಪಿಸುತ್ತದೆ. ಸ್ಥಳೀಯ ಇಲಾಖೆಗಳ ಸಹಾಯದಿಂದ ಚರಂಡಿಯ ಬ್ಲಾಕ್‌ಗಳನ್ನು ತೆರವುಗೊಳಿಸಬೇಕು. ಎಲ್ಲೆಂದರಲ್ಲಿ ನೀರು ಹರಿಯದಂತೆ ಅಗತ್ಯವಿದ್ದಲ್ಲಿ ಕಾಲುವೆಗಳನ್ನು ನಿರ್ಮಿಸಬಹುದು. ಕೆರೆಗಳು, ಸಣ್ಣ ಅಣೆಕಟ್ಟುಗಳು, ಕೋಡಿ ಕಟ್ಟೆಗಳ ಸುಸ್ಥಿರತೆಯನ್ನು, ಗುಣಮಟ್ಟವನ್ನು ಮೊದಲೇ ಪರಿಶೀಲಿಸಿ ಅಗತ್ಯವಿದ್ದಲ್ಲಿ ದುರಸ್ಥಿಗಳನ್ನು ಮಾಡಬೇಕು. ಇದರಿಂದ ಮುಂದೆ ಸಂಭವಿಸಬಹುದಾದ ದೊಡ್ಡ ವಿಪತ್ತನ್ನು ತಪ್ಪಿಸಬಹುದಾಗಿದೆ. ಇನ್ನು ವಿದ್ಯುತ್ ಕಂಬಗಳ ಸ್ಥಿತಿಗತಿಗಳು, ರಸ್ತೆಯ ಇಕ್ಕೆಲಗಳಲ್ಲಿರುವ ಅಪಾಯಕಾರಿ ಮರಗಳು, ಕುಸಿದು ಬೀಳುವಂತಹ ಗುಡ್ಡಪ್ರದೇಶದ ಧರೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಅಗತ್ಯವಿರುವ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು. ಕೆಲವು ಹಳ್ಳಿಗಳಲ್ಲಿ ಇಂದಿಗೂ ಕಾಲುಸಂಕಗಳಿವೆ. ಅವುಗಳನ್ನು ಬದಲಿಸಲು ಸರಕಾರದ ಗಮನಕ್ಕೆ ತಂದು ಸುರಕ್ಷಿತ ಸಣ್ಣ ಸೇತುವೆಗಳನ್ನು ಮಾಡಿಸಬೇಕು. ಮಳೆಗಾಲದಲ್ಲಿ (ಯಾವ ಕಾಲದಲ್ಲೂ) ಜಾನುವಾರುಗಳನ್ನು ವಿದ್ಯುತ್ ಕಂಬಗಳಿಗೆ ಕಟ್ಟಬಾರದು. ತುಂಬಾ ಹಳೆಯ ಮನೆಗಳಿದ್ದಲ್ಲಿ ಅವುಗಳ ಸುಸ್ಥಿರತೆಯನ್ನು ಸರಿಯಾಗಿ ಗಮನಿಸಿ ಅಪಾಯದ ಸ್ಥಿತಿಯಲ್ಲಿದ್ದರೆ ಖಂಡಿತಾ ದುರಸ್ಥಿಗೊಳಿಸಿಕೊಳ್ಳಬೇಕು. ಹೀಗೆ ಕೆಲವೊಂದು ಮುಂಜಾಗ್ರತೆಗಳನ್ನು ಕೈಗೊಳ್ಳುವ ಮೂಲಕ ಭವಿಷ್ಯದಲ್ಲಿ ಎದುರಾಗುವ ವಿಪತ್ತುಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ.
ಈ ಮುಂಜಾಗ್ರತಾ ಕ್ರಮಗಳು ಕೇವಲ ಪ್ರಾಕೃತಿಕ ವಿಪತ್ತಿಗೆ ಮಾತ್ರ ಅಲ್ಲ. ನಮ್ಮ ಬದುಕಿನಲ್ಲಿ ಇತರ ಅನೇಕ ವಿಷಯಗಳಿಗೆ ಅನ್ವಯವಾಗುತ್ತದೆ. ಅನೇಕ ಕುತಂತ್ರ ಜಾಣ್ಮೆಯನ್ನು ಉಪಯೋಗಿಸಿ ಆಧಾರ್ ನಂಬರಿನ ಬಳಕೆ ಮಾಡಿ ‘ಒಟಿಪಿ’ ಪಡೆದುಕೊಂಡು ಕ್ಷಣಾರ್ಧದಲ್ಲಿ ನಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಎಗರಿಸುವಂತಹ ದೊಡ್ಡ ಜಾಲವಿದ್ದು, ಇಷ್ಟೆಲ್ಲಾ ಸುದ್ದಿ ಮಾಡಿದರೂ ಈಗಲೂ ಒಟಿಪಿ ಅಥವಾ ಪಾಸ್‌ವರ್ಡ್ ಹೇಳಿ ಹಣ ಕಳೆದುಕೊಳ್ಳುವವರಿದ್ದಾರೆ. ‘ಯಾವುದೇ ಕಾರಣಕ್ಕೂ ನಿಮ್ಮ ಒಟಿಪಿ ಅಥವಾ ಪಾಸ್‌ವರ್ಡ್ಗಳನ್ನು ಯಾರಿಗೂ ತಿಳಿಸಬೇಡಿ’ ಎಂಬ ಮುನ್ನೆಚ್ಚರಿಕೆಗಳು ಇಷ್ಟೆಲ್ಲ ಹರಿದಾಡುತ್ತಿದ್ದರೂ ಪಾಠ ಕಲಿಯದೇ ಹಣ ಕಳೆದುಕೊಳ್ಳುವವರಿಗೆ ಏನೆನ್ನೋಣ! ದಿನಕ್ಕೊಂದು ಹೊಸ ನಕಲಿ ಸ್ಕೀಮ್‌ಗಳು ಈಗಲೂ ಹುಟ್ಟಿಕೊಂಡು ಸಾವಿರಾರು ಜನರು ಈಗಲೂ ಮೋಸ ಹೋಗುತ್ತಿದ್ದಾರೆ. ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾ ಜನರನ್ನು ಮೂರ್ಖರನ್ನಾಗಿಸುವ, ಆತಂಕಕ್ಕೊಳಪಡಿಸುವ ಪ್ರಯತ್ನಗಳು ಇಷ್ಟು ಮುಂದುವರಿದ ಕಾಲದಲ್ಲೂ ಆಗುತ್ತಿರುವುದು ಒಂದು ವಿಪರ್ಯಾಸವೇ ಸರಿ. ಇವುಗಳಿಗೆಲ್ಲ ಮದ್ದು ಜಾಗೃತಿ ಮತ್ತು ಮುಂಜಾಗ್ರತೆಗಳೇ ಆಗಿವೆ. ಸತ್ಪçಜೆಗಳಾದ ನಾವು ಪ್ರಜ್ಞಾವಂತರಾಗಿ ನಡೆದುಕೊಂಡು ಅಗತ್ಯ ಮುಂಜಾಗ್ರತೆಗಳನ್ನು ವಹಿಸಿದಲ್ಲಿ ಹೆಚ್ಚಿನ ವಿಪತ್ತುಗಳಿಂದ ರಕ್ಷಣೆ ಪಡೆದು ಸುರಕ್ಷಿತ ಸಮಾಜವನ್ನು ಕಾಪಾಡಲು ಸಾಧ್ಯವಿದೆ.
‘A Stitch in Time Saves Nine’ ಎಂಬ ಗಾದೆ ಮಾತನ್ನು ನೆನಪಿನಲ್ಲಿಟ್ಟುಕೊಂಡು ಸೂಕ್ತ ಸಮಯದಲ್ಲಿ ಮುನ್ನೆಚ್ಚರಿಕೆ ವಹಿಸಿ ವಿಪತ್ತುಗಳಿಂದ ಸುರಕ್ಷತೆಯನ್ನು ಪಡೆಯೋಣ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *