ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
‘ಚಿಟ್ಟೆಯನ್ನು ಹಿಡಿಯಬೇಕಾದರೆ ಅದರ ಹಿಂದೆ ಓಡಿ ದಣಿಯಬೇಕಾಗಿಲ್ಲ. ಒಂದು ಸುಂದರ ಕೈತೋಟ ನಿರ್ಮಾಣ ಮಾಡಿದರೆ ದುಂಬಿಗಳೇ ಅಲ್ಲಿಗೆ ಹಾರಿಕೊಂಡು ಬರುತ್ತವೆ’ ಎಂಬ ಒಂದು ಮಾತಿದೆ. ಈ ಮಾತಿನ ಅರ್ಥ ಏನೆಂದರೆ ಸಮಾಜದಲ್ಲಿ ಸಿಕ್ಕಿದವರೆಲ್ಲರ ಕಾಲಿಗೆ ಬಿದ್ದು ಒಂದು ಅವಕಾಶ ಕೊಡಿ ಅಂತ ಬೇಡಿಕೊಳ್ಳುವುದು, ಶಿಫಾರಸ್ಸಿಗಾಗಿ ದೊಡ್ಡವರ, ರಾಜಕಾರಣಿಗಳ ಮನೆ ಬಾಗಿಲಿಗೆ ಅಲೆದಾಡುವುದು ಇವನ್ನೆಲ್ಲ ಮಾಡಬೇಕಾಗಿಲ್ಲ. ಬದಲಾಗಿ ನಾಯಕತ್ವ, ಸಂವಹನ ಕಲೆಗಳನ್ನು ಕರಗತ ಮಾಡಿಕೊಂಡು, ಮನಸ್ಸು-ಬುದ್ಧಿಗಳನ್ನು ಹತೋಟಿಯಲ್ಲಿಟ್ಟುಕೊಂಡು ಯಾವುದೇ ದುಶ್ಚಟಗಳಿಗೆ ಬಲಿಬೀಳದಂತೆ ನೋಡಿಕೊಳ್ಳಬೇಕು. ಸಮಯೋಚಿತ, ಸಂದರ್ಭೋಚಿತವಾದ ಸದ್ಗುಣಗಳನ್ನು ಬೆಳೆಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ನಮ್ಮದಾಗಿಸಿಕೊಳ್ಳಬೇಕು. ಈ ಎಲ್ಲಾ ಗುಣಗಳಿದ್ದಾಗ ನೀವು ಎಲ್ಲೆ ಇರಿ ಎಲ್ಲರೂ ನಿಮ್ಮೆಡೆಗೆ ಆಕರ್ಷಿತರಾಗುತ್ತಾರೆ. ‘ಎಲ್ಲಾ ಬಣ್ಣ ಮಸಿ ನುಂಗಿತು’ ಎಂಬoತೆ ಕೆಲವೊಮ್ಮೆ ನಮ್ಮ ಸಣ್ಣ-ಪುಟ್ಟ ದೌರ್ಬಲ್ಯಗಳು ಸದ್ಗುಣಗಳನ್ನು ಮರೆಮಾಡುತ್ತವೆ.ಕೆಲವರಿಗೆ ಅನಗತ್ಯವಾಗಿ ಇನ್ನೊಬ್ಬರನ್ನು ಟೀಕಿಸುವ, ಕೀಳಾಗಿ ಕಾಣುವ, ಎಲ್ಲರೆದುರು ಗೇಲಿ ಮಾಡಿ ಅಪಹಾಸ್ಯ ಮಾಡುವ ಕೆಟ್ಟ ಗುಣಗಳಿರುತ್ತವೆ. ಜೊತೆಗೆ ತನ್ನ ಬಗ್ಗೆ ಅತಿಯಾದ ಪ್ರಶಂಸೆ ಕೂಡಾ ಸದ್ಗುಣಗಳೆನಿಸಿಕೊಳ್ಳುವುದಿಲ್ಲ. ಅತಿಯಾದ ಕೋಪ ಮತ್ತು ಅಹಂಕಾರಗಳು ವ್ಯಕ್ತಿತ್ವಕ್ಕೆ ಕಳಂಕವನ್ನು ತರಬಲ್ಲವು.
ಮನೆಯಿಂದ, ನಾವು ಕಲಿತ ಶಾಲೆಯಿಂದ, ಒಳ್ಳೆಯ ಸ್ನೇಹಿತರಿಂದ ಮುಂದೆ ಸಮಾಜದಿಂದ, ಒಳ್ಳೆಯ ಪುಸ್ತಕಗಳ ಓದಿನಿಂದ ವ್ಯಕ್ತಿತ್ವಕ್ಕೆ ಪೂರಕವಾದ ಅಂಶಗಳನ್ನು ಮೈಗೂಡಿಸಿಕೊಳ್ಳಬೇಕು. ದುಂಬಿ ಹತ್ತಾರು ಕಡೆ ಓಡಾಡಿ ಹೂವಿನ ಮಕರಂಧವನ್ನು ಹೀರಿ ತನ್ನದೇ ಆದ ರಸಪಾಕವನ್ನು ತಯಾರಿಸುವಂತೆ, ಮಜ್ಜಿಗೆಯನ್ನು ಕಡೆಯುವುದರ ಮೂಲಕ ಅದರ ಸಾರಸತ್ವವಾದ ಬೆಣ್ಣೆ ತೇಲಿ ಬರುವಂತೆ ನಮ್ಮೊಳಗಿನ ಚಿಂತನ-ಮoಥನಗಳಿoದ ನಮ್ಮೊಳಗೆ ಸತ್ವ ರೂಪುಗೊಂಡು ವ್ಯಕ್ತಿತ್ವ ನಿರ್ಮಾಣವಾಗಲು ಸಾಧ್ಯವಿದೆ.
ಮಾತು, ಮನಸ್ಸು, ಕಾಯ ಇವು ದೇವರು ಕೊಟ್ಟ ದಿವ್ಯ ಅಸ್ತçಗಳು. ಇವನ್ನು ಹೇಗೆ ಬಳಸುತ್ತೇವೆ ಎನ್ನುವುದರ ಮೇಲೆ ‘ನಾವು ಹೇಗೆ?, ನಮ್ಮ ವ್ಯಕ್ತಿತ್ವ ಹೇಗೆ?’ ಎಂಬುದು ನಿರ್ಣಯವಾಗುತ್ತದೆ. ಒಳಿತಿಗಾಗಿ ಬಳಸಿದಾಗ ಎಲ್ಲರೂ ಮಿತ್ರರಾಗುತ್ತಾರೆ. ಕೆಟ್ಟದಾಗಿ ಬಳಸಿದಾಗ ಅದೇ ಅಸ್ತçಗಳು ಮಾರಕವಾಗುತ್ತವೆ. ನಮ್ಮ ಮಾತು, ಮನಸ್ಸು, ನಡೆನುಡಿಗಳನ್ನು ಆಧಾರವಾಗಿರಿಸಿ ಜನ ನಮಗೆ ಬೆಲೆ ಕಟ್ಟುತ್ತಾರೆ ಅಥವಾ ನಮ್ಮನ್ನು ಅಳೆಯುತ್ತಾರೆ.
ಒಮ್ಮೆ ಯಾವುದೋ ಕಚೇರಿ ಕೆಲಸಕ್ಕೆ ಸಂದರ್ಶನ ನಡೆಯುತ್ತಿತ್ತು. ಸಂದರ್ಶನಕ್ಕೆ ಬಂದ ಹುಡುಗ ತನ್ನ ಸರದಿ ಬಂದಾಗ ಒಳಗೆ ಹೋಗಿ ಸಂದರ್ಶಕರಿಗೆ ಎರಡು ಕೈಜೋಡಿಸಿ ‘ನಮಸ್ಕಾರ ಸರ್’ ಅಂದನoತೆ. ತಕ್ಷಣ ಸಂದರ್ಶಕರು ಬೇರೆ ಪ್ರಶ್ನೆ ಕೇಳುವುದನ್ನು ಬಿಟ್ಟು ಆತ ಕಲಿತ ಶಾಲೆ ಬಗ್ಗೆ ವಿಚಾರಿಸಿದಾಗ ಆತ ಎಸ್.ಡಿ.ಎಂ. ಕಾಲೇಜಿನಲ್ಲಿ ಕಲಿತ ಸಿದ್ಧವನ ಗುರುಕುಲದ ವಿದ್ಯಾರ್ಥಿ ಎಂಬುವುದು ಗೊತ್ತಾಯಿತು. ಇದು ಆ ವಿದ್ಯಾಸಂಸ್ಥೆಯಲ್ಲಿ ಪಡೆದ ಸಂಸ್ಕಾರ. ಅದನ್ನು ಆತ ನಿಜ ಜೀವನದಲ್ಲಿ ಅಳವಡಿಸಿಕೊಂಡ ರೀತಿಯೂ ಸಂದರ್ಶಕರ ಗಮನ ಸೆಳೆದು ಆತನಿಗೆ ತಕ್ಷಣ ಕೆಲಸ ಸಿಕ್ಕಿತಂತೆ. ಇದು ತೋಟ ಬೆಳೆಸಿ ದುಂಬಿಗಳನ್ನು ಆಕರ್ಷಿಸುವ ರೀತಿ. ರಾಮಾಯಣದಲ್ಲಿ ಅಷ್ಟು ದೊಡ್ಡ ಕಪಿ ಸೈನಿಕರ ಮಧ್ಯೆ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಂಡ ಪುಟ್ಟ ಅಳಿಲು ರಾಮನ ದೃಷ್ಟಿಗೆ ಬಿದ್ದಂತೆ, ಪರಿಮಳ ಯಾವುದೇ ಕಡೆಯಿಂದ ಬಂದರೂ ಅದು ಎಲ್ಲರ ಮೂಗಿಗೆ ತಲುಪುತ್ತದೆ. ಆ ಪರಿಮಳದ ಮೂಲ ಹೂವು ಆಗಿರಬಹುದು. ಅಗರಬತ್ತಿ, ಲೋಭಾನ ಯಾವುದೇ ಆಗಿರಬಹುದು. ಹಾಗೆಯೇ ಹಾಡುಗಾರನ ಪರಿಚಯವಿಲ್ಲದಿದ್ದರೂ, ಆತನನ್ನು ನೋಡದಿದ್ದರೂ, ಎಲ್ಲೋ ಕೂತು ಕೇಳುವ ಹಾಡಿಗೆ ತಲೆದೂಗುತ್ತೇವೆ.
ನಮ್ಮಲ್ಲಿ ಒಬ್ಬರು ಚಿಕ್ಕ ಮಕ್ಕಳ ತಜ್ಞರಿದ್ದರು. ಆದರೆ ನಮ್ಮ ಊರವರೆಲ್ಲಾ ಅವರನ್ನು ಬಿಟ್ಟು ದೂರದ ಮಂಗಳೂರಿಗೆ ಹೋಗಿ ಮಕ್ಕಳ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದರು. ಆಗ ಮಂಗಳೂರಿನ ವೈದ್ಯರು ಹೇಳುತ್ತಿದ್ದರು. `ನೀವು ಇಲ್ಲಿಗೆ ಯಾಕೆ ಬರುತ್ತೀರಿ? ನಿಮ್ಮೂರಲ್ಲೆ ಒಳ್ಳೆಯ ಮಕ್ಕಳ ತಜ್ಞರಿದ್ದಾರಲ್ವಾ!’ ಎಂದು. ವ್ಯತ್ಯಾಸವೇನೆಂದರೆ ಊರಿನಲ್ಲಿ ಇದ್ದ ವೈದ್ಯರಿಗೆ ಮಕ್ಕಳನ್ನು ಸುಮ್ಮನಿರಿಸಿ, ಅವರು ಅತ್ತು ಗಲಾಟೆ ಮಾಡದಂತೆ ರಮಿಸಿ ಪರೀಕ್ಷೆ ಮಾಡುವ ವಿಧಾನ ಗೊತ್ತಿರಲಿಲ್ಲ. ಮುಖದಲ್ಲಿ ನಗುವಿರಲಿಲ್ಲ, ಹತ್ತು ಸಲ ಅದೇ ವೈದ್ಯರಲ್ಲಿಗೆ ಹೋದರೂ ಹೆತ್ತವರ, ಮಕ್ಕಳ ಪರಿಚಯ ಅವರಿಗಿರುತ್ತಿರಲಿಲ್ಲ. ಮಾತ್ರವಲ್ಲ, ಮಗುವಿನ ಹೆಸರನ್ನಾಗಲಿ ಅದು ಗಂಡೋ ಹೆಣ್ಣೋ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಕೂಡಾ ಅವರು ಎಂದಿಗೂ ಮಾಡಿದವರಲ್ಲ. ಆದರೆ ಮಂಗಳೂರಿನ ವೈದ್ಯರು ಕ್ಲಿನಿಕ್ಗೆ ಹೋದ ತಕ್ಷಣವೆ ಅವರು ಮಕ್ಕಳ ತಜ್ಞರೆಂಬುದಕ್ಕೆ ಅಲ್ಲಿ ಎಲ್ಲಾ ಪುರಾವೆಗಳಿರುತ್ತಿತ್ತು. ಒಂದಷ್ಟು ಗೊಂಬೆಗಳು, ಮಗುವಿನ ಮನ ಸೆಳೆಯುವಂತೆ ಗೋಡೆಯ ಬಣ್ಣ, ಜೊತೆಗೆ ಒಳ್ಳೆಯ ಮಾತು, ಒಂದಷ್ಟು ಚಾಕಲೇಟುಗಳು ಮಾತ್ರವಲ್ಲ, ಸ್ಟೆತೋಸ್ಕೋಪ್ನಲ್ಲೂ ಸಣ್ಣ ಸಣ್ಣ ಗೊಂಬೆಗಳಿರುತ್ತಿದ್ದವು. ಇವನ್ನು ನೋಡುತ್ತಾ ಮಕ್ಕಳು ನೋವು ಮರೆತು ಕಣ್ಣರಳಿಸಿ ಕುಳಿತಾಗ ಅವರ ಕೆಲಸ ಸಲೀಸಾಗಿ ಮುಗಿಯುತ್ತಿತ್ತು. ಮಗುತನದ ಹಂತ ದಾಟಿದ ಬಳಿಕವೂ ಚಿಕಿತ್ಸೆಗಾಗಿ ಅಲ್ಲಿಗೆ ಹೋದರೆ ‘ಇನ್ನು ಬೇರೆ ವೈದ್ಯರನ್ನು ನೋಡಿ, ನಾನು ಚಿಕ್ಕ ಮಕ್ಕಳಿಗಷ್ಟೆ ಚಿಕಿತ್ಸೆ ಕೊಡಬಲ್ಲೆ’ ಎನ್ನುತ್ತಾ ಅವರ ಬಾಲ್ಯದ ತುಂಟಾಟಗಳನ್ನು ನೆನಪಿಸುತ್ತಾ ಬೀಳ್ಕೊಡುತ್ತಿದ್ದರು. ಈ ವೈದ್ಯರ ಮದ್ದಿಗಿಂತ ಅವರ ಸರಳತೆ, ವ್ಯಕ್ತಿತ್ವ ಜನರನ್ನು ಆಕರ್ಷಿಸುತ್ತಿದ್ದವು. ಪಡೆದ ವಿದ್ಯೆ ಸಾರ್ಥಕತೆ ಕಾಣುವುದು ಇಂಥಾ ಸಂದರ್ಭಗಳಲ್ಲಿಯೇ.