ಸ್ವತಂತ್ರ ಭಾರತ

ಇಪ್ಪತ್ತೊಂದನೆ ಶತಮಾನದ ವೇಳೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟçವನ್ನಾಗಿ ಮಾಡಬೇಕು ಎಂಬುದು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಕನಸಾಗಿತ್ತು. ಅದನ್ನು ನನಸಾಗಿಸುವ ನಿಟ್ಟಿನಲ್ಲಿ ಭಾರತ ವಿಜ್ಞಾನ, ತಂತ್ರಜ್ಞಾನ, ಕೃಷಿ, ವ್ಯಾಪಾರ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ.
ನಮ್ಮ ದೇಶ ಸಾವಿರಾರು ವರ್ಷಗಳನ್ನು ಕಠಿಣ ಪರಿಸ್ಥಿತಿಯಲ್ಲಿ ಕಳೆದಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ರೀತಿಯ ಪ್ರಗತಿಯನ್ನು ಕಾಣುವ ಸಂದರ್ಭ ಆ ದಿನಗಳಲ್ಲಿರಲಿಲ್ಲ ಮತ್ತು ಅನೇಕ ಹಳ್ಳಿಗಳಲ್ಲಿ ಉಡಲು ಬಟ್ಟೆ, ಉಣ್ಣಲು ಅನ್ನ ಮತ್ತು ಶಿಕ್ಷಣ ಈ ಮೂರರ ಕೊರತೆಯಿತ್ತು. ಹಾಗಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಚಿಂತನೆಗೆ ಅವಕಾಶ ಇರಲಿಲ್ಲ. ಹೆಚ್ಚಿನ ಕುಟುಂಬಗಳಲ್ಲಿ ಕುಲಕಸುಬನ್ನು ಮಾಡುತ್ತಿದ್ದರು. ಕೃಷಿಕರಿಗೆ, ಕೃಷಿಯ ವಸ್ತುಗಳಿಗೆ ಬೆಲೆ ಇರಲಿಲ್ಲ ಮತ್ತು ಯಾವುದೇ ವಸ್ತುವನ್ನು ತಯಾರಿಸುವಂಥ ಗುಡಿ ಕೈಗಾರಿಕೆಗಳಿಗೂ ಅವಕಾಶವಿರಲಿಲ್ಲ. ‘ಒಂದು ಮುಡಿ (42 ಕಿ.ಲೊ.) ಅಕ್ಕಿಗೆ ಒಂದು, ಎರಡು ರೂಪಾಯಿ ಇತ್ತು’ ಎಂಬ ಮಾತುಗಳನ್ನು ನಾವು ಕೇಳಿದ್ದೇವೆ. ಆಗ ದಿನಗೂಲಿಯು ತುಂಬಾ ಕಡಿಮೆ ಇತ್ತು. ಅಂತೂ ಬಹಳ ಕಷ್ಟದ ದಿನಗಳನ್ನು ನಮ್ಮ ಹಿರಿಯ ತಲೆಮಾರಿನವರು ಕಳೆದಿದ್ದಾರೆ.
ಬ್ರಿಟಿಷರು ವಿಶ್ವದಾದ್ಯಂತ ಅನೇಕ ವಸಾಹತುಗಳನ್ನು ಸ್ಥಾಪಿಸಿದರು. ಆಡಳಿತಾತ್ಮಕ ವ್ಯವಹಾರ, ಸಂಪತ್ತಿನ ವಿಚಾರಕ್ಕೆ ಬಂದರೆ ಭಾರತದಲ್ಲಿ ದೊರೆತಷ್ಟು ಹಿಡಿತ ಅವರಿಗೆ ಬೇರೆಲ್ಲಿಯೂ ಸಿಗಲಿಲ್ಲ. ಇದಕ್ಕೆ ಕಾರಣ ಭಾರತ ಎನ್ನುವಂತಹದ್ದು ‘ಒಂದು ದೇಶ’ ಎನ್ನುವ ಕಲ್ಪನೆ ಇಲ್ಲಿನ ಜನರಲ್ಲಿರಲಿಲ್ಲ. ಏನಿದ್ದರೂ ರಾಜ್ಯದ ಕಲ್ಪನೆ ಮಾತ್ರ ಇತ್ತು. ಆಯಾ ರಾಜ್ಯದ ರಾಜರ ಆಡಳಿತಕ್ಕೆ ಒಳಪಟ್ಟ ಪ್ರದೇಶದವರಿಗೆ ನಾವು ಎನ್ನುವ ಭಾವನೆ ಅಧಿಕವಾಗಿತ್ತು. ಪಾಶ್ಚಿಮಾತ್ಯದಿಂದ ಬಂದ ಅರಬರು, ಮೊಘಲರು ದೇಶದ ಅನೇಕ ಕಡೆಗಳಲ್ಲಿದ್ದ ರಾಜರ ಮೇಲೆಲ್ಲ ಯುದ್ಧ ಸಾರಿ, ಸಂಪತ್ತನ್ನು ಲೂಟಿ ಮಾಡಿದಾಗಲೂ ಆಯಾ ರಾಜ್ಯದ ರಾಜರುಗಳು ಹೋರಾಟ ಮಾಡಿದರೇ ಹೊರತು ಸಂಘಟಿತ ಹೋರಾಟ ನಡೆದಿರಲಿಲ್ಲ. ಹಾಗಾಗಿ ಭಾರತ ದೇಶವನ್ನು ಬ್ರಿಟಿಷರು ಚೆನ್ನಾಗಿ ಲೂಟಿ ಮಾಡಿದರು. 1930ರ ದಶಕದಲ್ಲಿ ಬ್ರಿಟಿಷರ ವಿರುದ್ಧ ಸಿಡಿದೆದ್ದ ಅನೇಕ ಪ್ರತಿಭಟನಾಕಾರರನ್ನು ಬ್ರಿಟಿಷರು ಗಲ್ಲಿಗೇರಿಸಿದರು. ಚಂದ್ರಶೇಖರ ಆಜಾದ್‌ರಂಥವರು ಹುತಾತ್ಮರಾದರು. ಗಾಂಧೀಜಿಯ ನೇತೃತ್ವ, ಸರ್ದಾರ್ ವಲ್ಲಭಭಾಯಿ ಪಟೇಲ್, ಬಾಲಗಂಗಾಧರನಾಥ್ ತಿಲಕ್ ಮುಂತಾದವರ ಮುಂದಾಳತ್ವದಲ್ಲಿ ದೇಶದಾದ್ಯಂತ ಸ್ವಾತಂತ್ರ್ಯ ಹೋರಾಟ ಉಗ್ರರೂಪ ತಳೆಯಿತು. ‘ಗಣೇಶೋತ್ಸವ’ ಆಚರಣೆಯ ಮೂಲಕ ಜನರನ್ನು ಒಗ್ಗೂಡಿಸಿ, ನಾವೆಲ್ಲರೂ ಒಂದು ಎನ್ನುವ ಜಾಗೃತಿ ಮೂಡಿಸಿ, ದೇಶಪ್ರೇಮದ ಭಾವನೆಯನ್ನು ಬಿತ್ತಿದವರು ತಿಲಕರು. ಪ್ರಾರಂಭದಲ್ಲಿ ಕೆಲವು ರಾಜರು ನಾವೇ ಸ್ವತಂತ್ರರು ಎನ್ನುವ ಭಾವನೆ ತಳೆದರೂ ಕೊನೆಗೆ ಅವರೂ ಈ ರಾಷ್ಟçಪ್ರವಾಹಕ್ಕೆ ಸೇರಿದರು.
ಸ್ವಾತಂತ್ರ್ಯ ಸಂಗ್ರಾಮಕ್ಕೆ ಜನರನ್ನು ಒಗ್ಗೂಡಿಸಿ ಭಾರತದ ಶಕ್ತಿಯನ್ನು ಅನಾವರಣ ಮಾಡಿದವರು ಮಹಾತ್ಮ ಗಾಂಧೀಜಿಯವರು. ಒಡೆದಾಳುವ ನೀತಿಯಲ್ಲಿ ಆಳ್ವಿಕೆ ನಡೆಸಿದ ಆಂಗ್ಲರ ವಿರುದ್ಧ ಒಗ್ಗಟ್ಟಿನ ಮಂತ್ರವನ್ನು ಅನುಕರಣಿಸುವಂತೆ ಮಾಡಿದರು. ಭಗತ್ ಸಿಂಗ್, ಸುಭಾಶ್ಚಂದ್ರ ಬೋಸ್‌ರಂತವರು ಕ್ರಾಂತಿಕಾರಿ ನಡೆ ಮೂಲಕ ಬ್ರಿಟಿಷರ ಅಹಂಕಾರ, ಸೊಕ್ಕನ್ನು ಅಡಗಿಸಲು ಯತ್ನಿಸಿದರು. ಅಲ್ಲದೆ ಸ್ವಾತಂತ್ರ್ಯ ಪಡೆಯಲೇಬೇಕು ಎಂಬ ಕಿಚ್ಚಿಗೆ ಮತ್ತಷ್ಟು ಬಲ ತುಂಬಿದರು. ಸಂಪರ್ಕ ಹಾಗೂ ಸಂವಹನಗಳೆಲ್ಲ ಕಷ್ಟಕರವಾಗಿದ್ದ ಆ ಸಂದರ್ಭದಲ್ಲಿ ನೇತಾಜಿ ‘ಐಎನ್‌ಎ’ ಕಟ್ಟಿದರು. ಹಾಗೂ ಹಲವು ಕಡೆಗಳಲ್ಲಿ ಬ್ರಿಟಿಷರ ವಿರುದ್ಧ ಸಶಸ್ತç ಹೋರಾಟವನ್ನೂ ಮಾಡಿದರು.
ಗಾಂಧೀಜಿಯವರ ಅಸಹಕಾರ ಚಳುವಳಿಗೆ ಜನಬೆಂಬಲ ವ್ಯಕ್ತವಾಯಿತು. ಬಹುಶಃ ಮಹಿಳೆಯರು ಪುರುಷರಿಗೆ ಸಮಾನವಾಗಿ ಹೋರಾಟದಲ್ಲಿ ಭಾಗಿಯಾದ ಪ್ರಥಮ ಸಂದರ್ಭ ಇದೆಂದು ಸ್ವಾತಂತ್ರ್ಯ ಹೋರಾಟವನ್ನು ಪರಿಗಣಿಸಬಹುದು.
ಸ್ವಾತಂತ್ರ್ಯ ಪ್ರಾಪ್ತಿಯ ಬಳಿಕ ಸಾಕಷ್ಟು ಮಹನೀಯರು ಹಗಲು, ರಾತ್ರಿ ಎನ್ನದೇ ಶ್ರಮಿಸಿದ ಫಲವೇ ಇಂದಿನ ಸಶಕ್ತ ಭಾರತ. ಈ ಪ್ರಗತಿ ಸಾಧಿಸಲು ಕಾರಣಕರ್ತರಾದವರನ್ನು, ಬಲಿದಾನ ಮಾಡಿದ ನಮ್ಮ ಪೂರ್ವಜರನ್ನು ನಾವು ಎಂದಿಗೂ ಮರೆಯಬಾರದು. ಸ್ವತಂತ್ರ ಭಾರತದ ಕನಸು ಕಂಡು ಬ್ರಿಟಿಷರನ್ನು ಈ ದೇಶದಿಂದ ಓಡಿಸಬೇಕು, ನಮ್ಮ ದೇಶದ ಆಡಳಿತವನ್ನು ಪ್ರಜೆಗಳೇ ವಹಿಸಿಕೊಳ್ಳಬೇಕು, ಮುಂದೆ ಪ್ರಜಾಪ್ರಭುತ್ವ ಇರಬೇಕು, ಪ್ರಜಾಪ್ರಭುತ್ವದಿಂದ ಜನರ ಆಶೋತ್ತರಗಳು ಈಡೇರಬೇಕು ಎನ್ನುವುದನ್ನು ಪ್ರತಿಪಾದಿಸಿದವರು ಸ್ವತಂತ್ರ ಭಾರತದ ಮೊದಲನೇ ತಲೆಮಾರಿನವರು. ಜನರ ನಿರೀಕ್ಷೆಗಳೇನು? ಜನರ ಬದುಕಿಗೆ ಬೇಕಾದಂಥ ವ್ಯವಹಾರಗಳನ್ನು ಅವರೇ ನಿರ್ವಹಿಸುವುದು ಹೇಗೆ? ಎನ್ನುವುದನ್ನು ಅನೇಕ ಮಹನೀಯರು ಹೇಳಿಕೊಟ್ಟರು, ದಾರಿ ತೋರಿದರು. ತಮ್ಮ ಜ್ಞಾನವನ್ನು ಮುಂದಿನ ಪೀಳಿಗೆಗಾಗಿ ಧಾರೆ ಎರೆದರು.
ಭಾರತವು ಪ್ರಗತಿ ಪಥದಲ್ಲಿ ಅನೇಕ ಏಳು – ಬೀಳುಗಳನ್ನು ಕಂಡಿದ್ದು, ಪ್ರಸ್ತುತ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ವರ್ಚಸ್ಸನ್ನು ಹೊಂದಿದೆ. ವೈರಿ ರಾಷ್ಟçಗಳನ್ನು ಎದುರಿಸುವುದರ ಜೊತೆಗೆ ಭಯೋತ್ಪಾದನೆ, ಉಗ್ರಗಾಮಿ ಕೃತ್ಯಗಳನ್ನು ತಡೆಯಲು ಸಶಕ್ತವಾದ ಸೇನಾಬಲವನ್ನು ಹೊಂದಿದೆ. ಕಾರ್ಗಿಲ್ ಯುದ್ಧವನ್ನು ಜಯಿಸಿ ನಮ್ಮ ಸೇನಾಬಲದ ತಾಕತ್ತೇನು ಎಂದು ವೈರಿ ರಾಷ್ಟçಗಳಿಗೆ ಮನದಟ್ಟು ಮಾಡಿಸಿದೆ. ಅನೇಕ ಆಂತರಿಕ ಕಲಹ, ಸಮಸ್ಯೆಗಳನ್ನು ಬಗೆಹರಿಸಿಕೊಂಡು ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಉತ್ತಮ ಪ್ರಜಾಪ್ರಭುತ್ವದ ನಾಡೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
‘ಸ್ವಾತಂತ್ರ್ಯ ನಮ್ಮ ಹಕ್ಕು, ಇದಕ್ಕಾಗಿ ಬಲಿದಾನವನ್ನೂ ಮಾಡಲು ಸಿದ್ಧ’ ಎಂದು ದೇಶವಾಸಿಗಳು ಈ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಅಂಥ ತ್ಯಾಗ, ಬಲಿದಾನಗಳನ್ನು ಮಾಡಿದ ಹಿರಿಯರೆಲ್ಲರನ್ನು ನಾವೆಲ್ಲ ಸ್ಮರಿಸಬೇಕಾಗಿದೆ. ಅವರ ತ್ಯಾಗಕ್ಕೆ ಮಹತ್ವವನ್ನು ನೀಡಿ ಅವರಿಗೆ ಧನ್ಯವಾದವನ್ನು ಅರ್ಪಿಸಬೇಕು. ಈ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಲವರು ಪೆಟ್ಟು ತಿಂದರು, ಜೈಲು ಸೇರಿದರು, ಗುಂಡೇಟಿಗೆ ಬಲಿಯಾದರು. ಅನೇಕ ಸ್ತ್ರೀಯರು ವಿಧವೆಯಾದರು. ಇನ್ನಷ್ಟು ಮಂದಿ ಭೂಗತವಾಗಿ ಹೋರಾಟಗಳನ್ನು ನಡೆಸಿದರು. ಅವರು ಪಟ್ಟ ಕಷ್ಟ, ಮಾಡಿದ ತ್ಯಾಗ ಸಹಾಯದಿಂದಾಗಿ ಇಂದಿನ ತಲೆಮಾರಿನವರೆಲ್ಲರೂ ನೆಮ್ಮದಿಯ, ಸುಖದ ಜೀವನ ನಡೆಸುವಂತಾಗಿದೆ. ‘ಬಹಳ ಕಷ್ಪಪಟ್ಟು ದೇಶಕ್ಕೆ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟಿದ್ದೀರಿ. ಇದರ ರಕ್ಷಣೆಗೆ ನಾವು ಸದಾ ಸಿದ್ಧ. ಎಂತಹ ಕಷ್ಟದ ಸನ್ನಿವೇಶ ಎದುರಾದರೂ ನಮ್ಮ ದೇಶದ ಜೊತೆಗೆ ನಾವು ಇರುತ್ತೇವೆ. ದೇಶದ ಗೌರವವನ್ನು ಹೆಚ್ಚಿಸುತ್ತೇವೆ.’ ಎಂಬ ಪ್ರತಿಜ್ಞೆಯನ್ನು ಈ ಬಾರಿಯ ಸ್ವಾತಂತ್ರ್ಯದ ದಿನ ಕೈಗೊಳ್ಳುವ ಮೂಲಕ ನಮ್ಮವರು ದೊರಕಿಸಿಕೊಟ್ಟ ಸ್ವಾತಂತ್ರ್ಯವನ್ನು ರಕ್ಷಿಸೋಣ. ನಾವು ಸ್ವತಂತ್ರರಾಗಿ ಬದುಕೋಣ ಮತ್ತು ನಮ್ಮ ಮುಂದಿನ ಜನಾಂಗಕ್ಕೂ ಬದುಕಲು ಅವಕಾಶ ಕಲ್ಪಿಸಿಕೊಡೋಣ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *